Gyanpeeth Award

ಭಾರತೀಯ ಜ್ಞಾನಪೀಠ ಸಾಹಿತ್ಯ ಪ್ರಶಸ್ತಿ

'ಭಾರತೀಯ ಜ್ಞಾನಪೀಠ ಸಾಹಿತ್ಯ ಪ್ರಶಸ್ತಿ' ಯು ಭಾರತೀಯ ಭಾಷೆಗಳಲ್ಲಿ ಸರ್ವೋತ್ಕೃಷ್ಟ ಸೃಜನಾತ್ಮಕ ಕೃತಿಯೆಂದು ಪರಿಗಣಿತವಾದ ಗ್ರಂಥವೊಂದಕ್ಕೆ ಪ್ರತಿ ವರ್ಷವೂ ಸಲ್ಲುವ ಶ್ರೇಷ್ಠ ಪಾರಿತೋಷಕವಾಗಿದೆ. ಕನ್ನಡದಲ್ಲಿ ಈವರೆಗೆ ಎಂಟು ಸಾಹಿತ್ಯ ಶ್ರೇಷ್ಠರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಾಹಿತಿಗಳ ಕಿರು ಪರಿಚಯ ಇಲ್ಲಿ ನೀಡಲಾಗಿದೆ.

Kuvempu

ಕುವೆಂಪು

'ಕುವೆಂಪು' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಸಾಹಿತ್ಯದ ದಿಗ್ಗಜರಲ್ಲೊಬ್ಬರು.

ಭಾರತೀಯ ಜ್ಞಾನಪೀಠವು ೧೯೬೨ರ ಸಾಹಿತ್ಯ ಪುರಸ್ಕಾರವನ್ನು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಮಹಾಕಾವ್ಯವಾದ 'ಶ್ರೀ ರಾಮಾಯನ ದರ್ಶನಂ' ಕೃತಿಗೆ ನೀಡಿದೆ. ಈ ಕೃತಿಯು ೧೯೩೫ರಿಂದ ೧೯೬೦ರವರೆಗೆ ಭಾರತೀಯ ಭಾಷೆಗಳಲ್ಲಿ ಪ್ರಕಾಶಿಸಲಾದ ಸೃಜನಾತ್ಮಕ ಕೃತಿಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠವಾದ ಕೃತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

೧೯೪೯ ರಲ್ಲಿ ಪ್ರಕಟಗೊಂಡ 'ಶ್ರೀ ರಾಮಾಯನ ದರ್ಶನಂ' ಕುವೆಂಪುರವರ ಹತ್ತು ವರ್ಷಗಳ ಸತತ ಸಾಧನೆಯ ಫಲ. ಈ ಕಾವ್ಯವನ್ನು ಕುವೆಂಪುರವರು ತಮ್ಮದೇ ಆದ ವಿಶಿಷ್ಟ ಛಂಧಸ್ಸಿನಲ್ಲಿ ರೂಪುಗೊಳಿಸಿದ್ದಾರೆ. ಇದರ ಮೂಲಗ್ರಂಥ ವಾಲ್ಮೀಕಿ ರಾಮಾಯಣವಾದರೂ ಇದರಲ್ಲಿ ಬರುವ ಪಾತ್ರಗಳ, ಸನ್ನಿವೇಶಗಳ ಚಿತ್ರಣ ವಿಭಿನ್ನವಾಗಿದೆ.

ಕುವೆಂಪು ಅವರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

D. R. Bendre

ದ. ರಾ. ಬೇಂದ್ರೆ

ಭಾರತೀಯ ಜ್ಞಾನಪೀಠದ ೧೯೭೩ ನೆಯ ಸಾಹಿತ್ಯ ಪುರಸ್ಕಾರವನ್ನು ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರಿಗೆ, ಅವರ ಕನ್ನಡದ ಕಾವ್ಯ ಸಂಗ್ರಹ 'ನಾಕುತಂತಿ' ಯನ್ನು ೧೯೬೨ರಿಂದ ೧೯೬೬ರ ವರೆಗೆ ಪ್ರಕಾಶಿಸಲ್ಪಟ್ಟ ಭಾರತೀಯ ಭಾಷೆಗಳಲ್ಲಿನ ಸೃಜನಾತ್ಮಕ ಸಾಹಿತ್ಯಗಳಲ್ಲಿ ಸರ್ವ ಶ್ರೇಷ್ಠವೆಂದು ನಿರ್ಣಯಿಸಿ, ಘೋಷಿಸಿ ಗೌರವವನ್ನು ಸಮರ್ಪಿಸಲಾಗಿದೆ.

ಡಾ|| ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ. ಬೇಂದ್ರೆಯವರ ಸೃಷ್ಟಿಯ ಬಹುಪಾಲು ಕವನದ ರಚನೆಗೆ ಮೀಸಲಿದೆ. ಉಳಿದ ಅಲ್ಪಪಾಲು ನಾಟಕ, ಪ್ರಬಂಧ, ಸಣ್ಣಕಥೆ ಮತ್ತು ಅನುವಾದ ಕೃತಿಗಳಿಗೆ ಸಂಬಂಧಿಸಿದೆ. ಜಾನಪದ ಗೀತೆಗಳ ಧಾಟಿಯಲ್ಲಿ ಹುಟ್ಟಿದ ಗೀತೆಗಳು ಕಲಿತವರನ್ನೂ, ಕಲಿಯದವರನ್ನೂ ಮಂತ್ರ ಮುಗ್ದರನ್ನಾಗಿಸುತ್ತದೆ.

ಪುರಸ್ಕೃತ ಕವನ ಸಂಕಲನ 'ನಾಕುತಂತಿ' ನಲವತ್ತು ನಾಲ್ಕು ಕವನಗಳ ಒಂದು ಪುಟ್ಟ ಸಂಕಲನ ಗ್ರಂಥ. ಇದು ಆತ್ಮ-ಆಧ್ಯಾತ್ಮ, ಲೌಕಿಕ-ಪಾರಮಾರ್ಥ, ವ್ಯಕ್ತಿ-ಶಕ್ತಿ, ಕೃಷಿ-ರಾಜಕೀಯ, ಭಕ್ತಿ-ಬೋಧೆ, ಶ್ರವಣ-ಅಂತಃಕರಣ - ಇತ್ಯಾದಿ ದ್ವಂದ್ವಗಳನ್ನು ಧ್ವನಿಸಿದೆ.

ಬೇಂದ್ರೆಯವರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ .

Shivaram Karanth

ಶಿವರಾಮ ಕಾರಂತ

ಭಾರತೀಯ ಜ್ಞಾನಪೀಠದ ೧೯೬೨ರ ಸಾಹಿತ್ಯ ಪುರಸ್ಕಾರವು ಡಾ. ಶಿವರಾಮ ಕಾರಂತರಿಗೆ, ಅವರ ಕನ್ನಡದ ಕಾದಂಬರಿ "ಮೂಕಜ್ಜಿಯ ಕನಸುಗಳು"ಗಾಗಿ ಸಮರ್ಪಿತವಾಗಿದೆ. ಇದನ್ನು ೧೯೬೯-೭೦ರ ನಡುವೆ ಪ್ರಕಾಶಿಸಲ್ಪಟ್ಟ ಭಾರತೀಯ ಭಾಷೆಗಳ ಸೃಜನಾತ್ಮಕ ಸಾಹಿತ್ಯ ಕೃತಿಗಳಲ್ಲೆಲ್ಲಾ ಸರ್ವಶ್ರೇಷ್ಠವಾದದ್ದೆಂದು ವಿಧಿವತ್ತಾಗಿ ನಿರ್ಣಯಸಿ, ಘೋಷಿಸಲಾಗಿದೆ.

ಪ್ರಶಸ್ತಿ ಪುರಸ್ಕೃತ 'ಮೂಕಜ್ಜಿಯ ಕನಸುಗಳು' , ಕಾದಂಬರಿಯ ವಸ್ತು ಅಸಾಧಾರಣ ವ್ಯಕ್ತಿತ್ವದ ಒರ್ವ ವೃದ್ಧ ವಿಧವೆಯ ಸುತ್ತಲಿನ ಜೀವನದಲ್ಲಿ ಕೇಂದ್ರಿತವಾಗಿದೆ. ಮೂಕಜ್ಜಿ ಎಂದರೆ ಮಾತನಾಡಲಾಗದ ಮೂಕಿ ಅಜ್ಜಿ ಅಲ್ಲ. ಎಂಬತ್ತು ವರ್ಷಗಳ ಒಬ್ಬ ಮೌನಿ ವಿಧವೆ.

ಒಬ್ಬ ವೃದ್ಧ ಮಹಿಳೆ, ದೇಶದ ಪ್ರಾಚೀನ ಪ್ರತಿನಿಧಿಯ ರೂಪದಲ್ಲಿ, ಒಂದು ಅಶ್ವತ್ಥ ವೃಕ್ಷದ ಕೆಳಗೆ ಕುಳಿತಿದ್ದ ತಮ್ಮ ಮೊಮ್ಮಗನಿಗೆ ಅತೀತತದ ಚಿತ್ರದ ದರ್ಶನವನ್ನು ಮಾಡಿಸುತ್ತಾಳೆ. ಈ ರೀತಿಯಾಗಿ ಮಿಥ್ಯತೆ ಮತ್ತು ಛಲಗಳ ಆವರಣಗಳನ್ನು ಕಿತ್ತೆಸೆಯುತ್ತಾಳೆ.ಅಸಾಧಾರಣ ವ್ಯಕ್ತಿತ್ವಗಳಿಂದ ಆದ ಕಾರಂತರ ಮೂಕಜ್ಜಿ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಅಪೂರ್ವವಾದುದು.

'ಕಡಲ ತೀರದ ಭಾರ್ಗವ' ಎಂದೇ ಪ್ರಸಿದ್ಧರಾಗಿರುವ ಕೋಟ ಶಿವರಾಮ ಕಾರಂತರು ಸಾಹಸ ಮನೋವೃತ್ತಿಯ ಸಾಹಿತಿ. ಜಾನಪದ ಮೇಳದಲ್ಲಿ ಭಾಗವತ, ಯಕ್ಷಗಾನದಲ್ಲಿ ನಟ, ಲಲಿತಕಲೆಗಳಲ್ಲಿ ನಾಡೋಜ ಹೀಗೆ ಹಲವು ಕ್ಷೇತ್ರಗಳಲ್ಲಿ ದುಡಿದು ಅನುಭವವನ್ನು ಸಂಪಾದಿಸಿಕೊಂಡಿದ್ದಾರೆ. 'ಆಡು ಮುಟ್ಟದ ಸೊಪ್ಪಿಲ್ಲ ಕಾರಂತ ಕೈಹಾಕದ ಕಲಾಪ್ರಕಾರವಿಲ್ಲ' ಎಂಬ ನಾಣ್ಣುಡಿಯು ಬಳಕೆಯಲ್ಲಿದೆ. ಇದು ಕಾರಂತರ ಸಾಹಸಮಯ ಜೀವನವನ್ನು, ಅವರ ಅಧ್ಯಯನಶೀಲತೆಯನ್ನು ತೋರಿಸುತ್ತದೆ.

Masthi Venkatesh Aiyyangar

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಭಾರತೀಯ ಜ್ಞಾನಪೀಠದ ೧೯೮೩ನೆಯ ಜ್ಞಾನಪೀಠ ಪುರಸ್ಕಾರವನ್ನು, 'ಶ್ರೀನಿವಾಸ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿರುವ, ಮಾಸ್ತಿ ವೆಂಕಟೇಶ ಅಯ್ಯಂಗಾರ್‍ ರವರಿಗೆ, ಅವರ ಕಾದಂಬರಿ 'ಚಿಕವೀರರಾಜೆಂದ್ರ' ಕೃತಿಗೆ ಸಮರ್ಪಿಸಲಾಗಿದೆ.

'ಚಿಕವೀರರಾಜೇಂದ್ರ' ಕೊಡಗಿನ ಅಂತಿಮ ರಾಜನ ಕಥೆ. ಕುಲೀನಳೂ ಬುದ್ಧಿವಂತಳೂ ಆದ ರಾಣಿ ಮತ್ತು ಇಬ್ಬರು ಯೋಗ್ಯ ಮಂತ್ರಿಗಳಿದ್ಯಾಗ್ಯೂ, ಚಿಕವೀರರಾಜೇಂದ್ರನು ತನ್ನ ನಾಶವನ್ನು ತಡೆಯಲಾಗಲಿಲ್ಲ. ಸಂಘರ್ಷಣೆಯಲ್ಲಿ ಇಂಗ್ಲೀಷರಿಂದ ಸೋತು, ದೇಶಭ್ರಷ್ಟನೂ ಆದ.

'ಚಿಕವೀರರಾಜೇಂದ್ರ' ಕೃತಿ ಒಬ್ಬ ರಾಜನ ವಿನಾಶದ ಕಾರ್ಯದ ಕಥೆಯಷ್ಟೆ ಅಲ್ಲದೆ, ಒಂದು ಸಮಾಜದ ನಿರಾಸಕ್ತಿಯ ಕಥೆಯೂ ಆಗಿದೆ. ಸಮಾಜದ ಮತ್ತು ಅದರ ಅಭಿನ್ನ ಅಂಗಗಳ ಪಾರಸ್ಪರಿಕ ಸಂಬಂಧಗಳ ಸಜೀವ ಚಿತ್ರಣ ಈ ಕಾದಂಬರಿಯಲ್ಲಿ ದೊರಕುತ್ತದೆ.

ಮಾಸ್ತಿಯವರು 'ಕನ್ನಡದ ಕಥೆಗಳ ಜನಕ' ರಾಗಿ ಬಹಳ ಖ್ಯಾತಿಯನ್ನು ಪಡೆದವರು. ಕನ್ನಡದ ಎಲ್ಲಾ ಮುಖ್ಯ ಲೇಖಕರೂ ಕಾದಂಬರಿಗಳ ಕಡೆಗೆ ವಾಲಿದಾಗ, ಮಾಸ್ತಿ ಅವರು ಸೃಜನಾತ್ಮಕ ಕಥೆಗಳಿಗೇ ಅಂಟಿಕೊಂಡಿದ್ದರು. ಅವರ ಕಥೆಗಳು ಓದುಗನನ್ನು ಶತಾಬ್ದಿಯಿಂದ ಶತಾಬ್ದಿಗೆ ಮತ್ತು ದೇಶದಿಂದ ದೇಶಕ್ಕೆ ಯಾತ್ರೆ ಮಾಡಿಸುತ್ತವೆ. ಮಾಸ್ತಿಯವರು ೭೦ ವರ್ಷಗಳಿಗಿಂತಲೂ ಹೆಚ್ಚಾಗಿ ಕನ್ನಡದ ಪುನರುತ್ಥಾನದ ಆದ್ಯರಾಗಿದ್ದರು. ಅವರು ಸಾಹಿತ್ಯದ ಸಂವರ್ಧನೆಗೆ ವ್ಯಾಪಕವಾದ ಯೋಗದಾನ ಮಾಡಿದ್ದಾರೆ.

V K Gokak

ವಿ. ಕೃ. ಗೋಕಾಕ್

ಭಾರತೀಯ ಜ್ಞಾನಪೀಠವು ಪ್ರೊ. ವಿನಾಯಕ ಕೃಷ್ಣ ಗೋಕಾಕರಿಗೆ ೧೯೭೦ರಿಂದ ೧೯೮೪ರ ಅವಧಿಯ ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೧೯೯೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.

'ವಿನಾಯಕ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಗೋಕಾಕರ ಸಾಹಿತ್ಯ ಸೇವೆ ಅಪಾರ. ಕನ್ನಡದಲ್ಲಿ ಐವತ್ತು ಮತ್ತು ಇಂಗ್ಲೀಷಿನಲ್ಲಿ ೨೫ ಕ್ಕಿಂತ ಅಧಿಕ ಕೃತಿಗಳನ್ನು ರಚಿಸಿದ್ದಾರೆ.

ಗೋಕಾಕರು ತಮ್ಮ ಜೀವಿತ ಕಾಲದಲ್ಲಿಯೇ ಕಾವ್ಯ ಋಷಿಯಾಗಿ ಮಾಡಿದಂಥಹ ಕೃತಿ 'ಭಾರತಸಿಂಧು ರಶ್ಮಿ' . ಕನ್ನಡದ ಸ್ವಚ್ಛಂದ ಛಂದಸ್ಸಿನಲ್ಲಿ ೨೩,೦೦೦ ಕ್ಕಿಂತಲೂ ಹೆಚ್ಚು ಪಂಕ್ತಿಗಳಲ್ಲಿ ಜೋಡಿಸಿಟ್ಟ ಈ ಮಹಾಕಾವ್ಯದ ಕಥೆಯು ಋಗ್ವೇದವನ್ನು ಆಧರಿಸಿದೆ. ಆದರೆ ಪ್ರತಿಪಾದನೆ ಮಾತ್ರ ಆಧುನಿಕವಾದದ್ದು.

U. R. AnanthMurthy

ಯು. ಆರ್. ಅನಂತಮೂರ್ತಿ

ಭಾರತೀಯ ಜ್ಞಾನಪೀಠದ ೧೯೯೪ ನೆಯ ವರ್ಷದ ಜ್ಞಾನಪೀಠ ಪುರಸ್ಕಾರವು ಕನ್ನಡದ ಉತ್ಕೃಷ್ಟ ಲೇಖಕ ಡಾ. ಯು. ಆರ್. ಅನಂತಮೂರ್ತಿ ಅವರಿಗೆ, ಅವರ ೧೯೭೪ ರಿಂದ ೧೯೯೩ ರವರೆಗಿನ ಸಾಹಿತ್ಯ ಕ್ಷೇತ್ರದ ಯೋಗದಾನಕ್ಕಾಗಿ ಸಮರ್ಪಿತವಾಗಿದೆ.

ಓರ್ವ ಚಿಂತಕನಾಗಿ ಡಾ. ಅನಂತಮೂರ್ತಿಯವರು ಸಾಹಿತ್ಯದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳ ಮೇಲೆ ಒತ್ತು ಕೊಡುತ್ತಾ ಕನ್ನಡ-ಸಮೀಕ್ಷೆಯ ದಿಕ್ಕನ್ನೇ ಬದಲಾಯಿಸುವ ಸಾರ್ಥಕ ಕೆಲಸವನ್ನು ಮಾಡಿದ್ದಾರೆ.

ಅನಂತಮೂರ್ತಿಯವರು ಸೃಜನಾತ್ಮಕ ರಚನೆ ಹಾಗೂ ಸಾಂಸ್ಕೃತಿಕ ಚಿಂತನೆಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ಶ್ರೇಷ್ಠ ಸಾಹಿತಿಯಾಗಿದ್ದಾರೆ.

Girish Karnad

ಗಿರೀಶ್ ಕಾರ್ನಾಡ್

ಭಾರತೀಯ ಜ್ಞಾನಪೀಠದ ೧೯೯೮ ನೆಯ ವರ್ಷದ ಜ್ಞಾನಪೀಠ ಪುರಸ್ಕಾರವು ಕನ್ನಡದ ಪ್ರಖ್ಯಾತ ನಾಟಕಕಾರ ಶ್ರೀ ಗಿರೀಶ್ ಕಾರ್ನಾಡರಿಗೆ, ಭಾರತದ ಸಾಹಿತ್ಯದ ಶ್ರೀವೃದ್ಧಿಗಾಗಿ ೧೯೭೪ ರಿಂದ ೧೯೯೭ ರವರೆಗೆ ಅವರು ಮಾಡಿದ ಉತ್ಕೃಷ್ಟ ಯೋಗದಾನಕ್ಕಾಗಿ ಸಮರ್ಪಿತವಾಗಿದೆ.

ಗಿರೀಶ್ ಕಾರ್ನಾಡರು ನಾಟಕಕಾರರಾಗಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದವರು. ಆಧುನಿಕ ಕನ್ನಡ ನಾಟಕ ರಂಗಭೂಮಿಯಲ್ಲಿ ಅಗ್ರಗಣ್ಯ ಹೆಸರು ಕಾರ್ನಾಡರದು.

ಕಾರ್ನಾಡರದು ಅತ್ಯಂತ ಪ್ರತೀಭಾಶೀಲ, ಸಂವೇದನಾಶೀಲ ಮತ್ತು ಸೃಜನಶೀಲ ಬಹುಮಖ ವ್ಯಕ್ತಿತ್ವ. ಅವರು ನಾಟಕಾರಾಗಿಯಲ್ಲದೆ, ಚಲನಚಿತ್ರಗಳಲ್ಲಿ ನಟರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

Chandrashekhara Kambar

ಚಂದ್ರಶೇಖರ ಕಂಬಾರ

ಭಾರತೀಯ ಜ್ಞಾನಪೀಠವು ಡಾ. ಚಂದ್ರಶೇಖರ ಕಂಬಾರರಿಗೆ, ಭಾರತೀಯ ಸಾಹಿತ್ಯದ ಅಭಿವೃದ್ಧಿಗಾಗಿ ಅವರು ನೀಡಿದ ಉತ್ಕೃಷ್ಟ ಯೋಗದಾನಕ್ಕಾಗಿ ೨೦೧೦ ರ ಜ್ಞಾನಪೀಠ ಪುರಸ್ಕಾರವನ್ನು ಸಮರ್ಪಿಸಿದೆ.

ಕಂಬಾರರು ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ್, ಬೆಳಗಾವಿ, ಧಾರವಾಡದ ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ತಂದರು. ಧಾರವಾಡದ ವರಕವಿ ಡಾ. ದ.ರಾ.ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು.

ಕಂಬಾರರು ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೇ ಚಲನಚಿತ್ರ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರಗಳನ್ನಾಗಿಸಿದ್ದಾರೆ. ಕರಿಮಾಯಿ, ಸಂಗೀತಾ, ಕಾಡುಕುದುರೆ, ಸಿಂಗಾರವ್ವ ಮತ್ತು ಅರಮನೆ ಚಿತ್ರಗಳ ನಿರ್ದೇಶಕರಾಗಿದ್ದಾರೆ. ಕಂಬಾರರು ತಮ್ಮ ಚಿತ್ರಗಳಿಗೆ ಸ್ವತಃ ಸಂಗೀತ ನೀಡಿದ್ದಾರೆ. ಅವರು ಉತ್ತಮ ಜಾನಪದ ಹಾಡುಗಾರರು ಆಗಿದ್ದಾರೆ