ಬಾಗಿಲನು ತೆರೆದು

ಕನಕದಾಸರು

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ || ಪ ||

ಪರಮಪದದೊಳಗೆ ವಿಷಧರನ ತಲ್ಪದಲಿ ನೀ

ಸಿರಿಸಹಿತ ಕ್ಷೀರವಾರಿಧಿಯೊಳಿರಲು

ಕರಿರಾಜ ಕಷ್ಟದಲಿ ಆದಿಮೂಲ ಎಂದು

ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೇ || 1 ||

ಕಡುಕೋಪದಿಂ ಖಳನು ಖಡುಗ ಕೈಯಲಿ ಪಿಡಿದು ನಿ

ನ್ನೊಡೆಯನೆಲ್ಲಿಹನೆಂದು ಕಂಬವನು ಜಡಿಯೆ

ದೃಢಭಕುತಿಯಿಂ ಶಿಶುವು ಬಿಡದೆ ನಿನ್ನನು ಭಜಿಸೆ

ಸಡಗರದಿ ಸ್ತಂಭದಿಂದೊಡೆದೆ ನರಹರಿಯೆ || ೨ ||

ಯಮಸುತನ ರಾಣಿಗಕ್ಷಯವಸನವನಿತ್ತೆ

ಸಮಯದಲಿ ಅಜಮಿಳನ ಪೊರೆದೆ

ಸಮಾಯಾಸಮಯವುಂಟೆ ಭಕ್ತವತ್ಸಲ ನಿನಗೆ

ಕಮಾಲಾಕ್ಷ ಕಾಗಿನೆಲೆಯಾದಿ ಕೇಶವನೆ || ೩ ||