ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು

ಕೆ. ಎಸ್. ನರಸಿಂಹಸ್ವಾಮಿ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು

ಒಳಗೆ ಬರಲಪ್ಪಣೆಯೆ ದೊರೆಯೇ?

ನವೆಲೂರ ಮನೆಯಿಂದ ನುಡಿಯೊಂದ ತಂದಿಹೆನು

ಬಳೆಯ ತೊಡಿಸುವುದಿಲ್ಲ ನಿಮಗೆ

ಮುಡಿದ ಮಲ್ಲಿಗೆಯರಳು ಬಾಡಿಲ್ಲ, ರಾಯರೇ,

ತೌರಿನಲಿ ತಾಯಿ ನಗುತಿಹರು

ಕುಡಿದ ನೀರಲುಗಿಲ್ಲ, ಕೊರಗದಿರಿ, ರಾಯರೇ

ಅಮ್ಮನಿಗೆ ಬಳೆಯ ತೊಡಿಸಿದರು

ಅಂದು ಮಂಗಳವಾರ ನವಿಲೂರ ಕೇರಿಯಲಿ

ಓಲಗದ ಸದ್ದು ತುಂಬಿತ್ತು

ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ

ಅಂಗಳದ ತುಂಬ ಜನವಿತ್ತು

ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ

ಹೊಳೆದಿತ್ತು ಕೊರಳಿನಲಿ ಪದಕ

ಒಬ್ಬರೇ ಹಸೆಗೆ ಬಂದರು ತಾಯಿ ಬಿಂಕದಲಿ

ಕಣ್ತುಂಬ ನೋಡಿದೆನು ಮುದುಕ

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ

ಸೆರಗಿನಲಿ ಕಣ್ಣೀರನೊರೆಸಿ

ಸುಖದೊಳಗೆ ನಿಮ್ಮ ನೆನೆದಉ ತಾಯಿ ಗುಣವಂತೆ

ದೀಪದಲಿ ಬಿಡುಗಣ್ಣ ನಿಲ್ಲಿಸಿ

ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ

ಹೊಸ ಸೀರೆ, ರತ್ನಾಭರಣ

ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ

ನಿಮಗಿಲ್ಲ ಒಂದು ಹನಿ ಕರುಣ

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು

ಕುದಿಯಬಾರದು ನನ್ನ ದೊರೆಯೇ

ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು

ಒಣಗಬಾರದು ಒದಲ ಚಿಲುಮೆ

ಮುನಿಸು ಮಾವನ ಮೇಲೆ, ಮಗಳೇನು ಮಾಡಿದಳು?

ನಿಮಗೇತಕೀ ಕಲ್ಲು ಮನಸು

ಹೋಗಿ ಬನ್ನಿರಿ ಒಮ್ಮೆ, ಕೈಮುಗಿದು ಬೇಡುವೆನು

ಅಮ್ಮನಿಗೆ ನಿಮ್ಮದೇ ಕನಸು