ಗುರುವಿನ ಗುಲಾಮನಾಗುವ ತನಕ

ಪುರಂದರ ದಾಸರು

ಗುರುವಿನ ಗುಲಾಮನಾಗುವ ತನಕ

ದೊರೆಯದಣ್ಣ ಮುಕುತಿ

ಪರಿ ಪರಿ ಶಾಸ್ತ್ರವನೋದಿದರೇನು

ವ್ಯರ್ಥವಾಯ್ತು ಭಕುತಿ || ಪ ||

ಆರು ಶಾಸ್ತ್ರವ ಓದಿದರಿಲ್ಲ

ಮೂರು ಪುರಾಣವ ಮುಗಿಸಿದರಿಲ್ಲ

ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ

ಧೀರನಾಗಿ ತಾ ಪೇಳಿದರಿಲ್ಲ || 1 ||

ಕೊರಳೊಳು ಮಾಲೆ ಧರಿಸಿದರಿಲ್ಲ,

ಬೆರಳೊಳು ಜಪಮಣಿ ಜಪಿಸಿದರಿಲ್ಲ

ಮರುಳನಾಗಿ ಶರೀರಕೆ ಬೂದಿ

ಒರೆಸಿಕೊಂಡು ತಾ ತಿರುಗಿದರಿಲ್ಲ || ೨ ||

ನಾರಿಯ ಭೋಗ ಅಳಿಸಿದರಿಲ್ಲ

ಶಾರೀರಿಕ ಸುಖವ ಬಿಡಿಸಿದರಿಲ್ಲ

ನಾರದವರದ ಪುರಂದರ ವಿಠಲನ

ಸೇರಿಕೊಂಡು ಮುಕ್ತಿ ತಾ ಪಡೆಯುವ ತನಕ || ೩ ||